copy paste disbler

Sunday, March 29, 2020

ಜೈನ ಮಹಾಪುರಾಣದಲ್ಲಿನ ಕಾಲಗಣನೆ

ಜೈನ ಮಹಾಪುರಾಣದಲ್ಲಿನ ಕಾಲಗಣನೆ


ಮುಖ್ಯಕಾಲವನ್ನು ಆಶ್ರಯಿಸಿರುವ ವ್ಯವಹಾರಕಾಲವು ಮುಖ್ಯಕಾಲದಿಂದ ಬೇರೆಯಾದುದು.
ವ್ಯವಹಾರ ಕಾಲವು ಪದಾರ್ಥಗಳಲ್ಲಾಗುವ ಹಳೆಯದು-ಹೊಸದೆಂಬ ಪರ್ಯಾಯಗಳನ್ನು
ಸೂಚಿಸುವುದು.

ವರ್ತನೆಯೇ ಲಕ್ಷಣವಾಗುಳ್ಳ ಮುಖ್ಯಕಾಲದಿಂದ ಪರಿವರ್ತನೆಯಾದ ಭೂತ-ಭವಿಷ್ಯತ್-
ವರ್ತಮಾನರೂಪವಾದ ಕಾಲವು ವ್ಯವಹಾರಕ್ಕೆ ಸಮರ್ಥವಾಗುತ್ತದೆ.

ವ್ಯವಹಾರಕಾಲದ ಭೇದಗಳೆಂದರೆ - ಸಮಯ, ಆವಲಿಕಾ, ಉಚ್ಚ್ವಾಸ, ಘಳಿಗೆ.
ಸೂರ್ಯಾದಿಜ್ಯೋತಿಶ್ಚಕ್ರದ ಪರಿಭ್ರಮಣೆಯಿಂದ ಈ ಭೇದಗಳು ಉಂಟಾಗುವುದು. ಇದನ್ನೇ
ಕಾಲಚಕ್ರವೆಂದು ಕರೆಯುತ್ತಾರೆ.

ವ್ಯವಹಾರ ಕಾಲದಲ್ಲಿ ಭವಸ್ಥಿತಿ, ಆಯುಃಸ್ಥಿತಿ, ಕಾಯಸ್ಥಿತಿ, ಕರ್ಮಸ್ಥಿತಿಗಳೆಲ್ಲವೂ ಸೇರಿಕೊಂಡು
ಅನಂತ ಸಮಯ ಉಳ್ಳದ್ದಾಗುವುದು. ಈ ಕಾಲದ ಪರಿವರ್ತನೆಯೂ ಕೂಡ ಅನಂತ
ಪ್ರಕಾರವಾದದ್ದು. 

ವ್ಯವಹಾರ ಕಾಲವನ್ನು ಉತ್ಸರ್ಪಿಣೀಭೇದ, ಅವಸರ್ಪಿಣೀಭೇದ ಎಂಬ ಭೇದಗಳಿರುವುದು.

ಉತ್ಸರ್ಪಿಣೀ ಕಾಲದಲ್ಲಿ ಮಾನವನ ಶಕ್ತಿ, ಆಯುಸ್ಸು, ಶರೀರಪ್ರಮಾಣಗಳು ವೃದ್ಧಿಯಾಗುವುದು. 
ಅವಸರ್ಪಿಣೀ ಕಾಲದಲ್ಲಿ ಇವೆಲ್ಲವೂ ಕಡಿಮೆಯಾಗುವುದು.
ಉತ್ಸರ್ಪಿಣೀ ಕಾಲವು ಹತ್ತುಕೋಟಿ ಕೋಟಿ ಸಾಗರ ಪರಿಮಿತವಾದುದು.  ಹಾಗೇ ಅವಸರ್ಪಿಣೀ
ಕಾಲವೂ ಅಷ್ಟೇ ಕಾಲ ಪರಿಮಿತವಾದುದು. ಇವೆರಡೂ ಸೇರಿ ಇಪ್ಪತ್ತು ಕೋಟಿ ಕೋಟಿ ಸಾಗರ
ಕಾಲವಾಗಿ ಇದನ್ನು ಕಲ್ಪವೆನ್ನುವರು.

ಇವೆರಡೂ ಕಾಲಗಳನ್ನು ಆರು ಭೇದಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ :

ಅವಸರ್ಪಿಣೀಭೇದಕಾಲ - ಸುಷಮಸುಷಮಾ, ಸುಷಮಾ, ಸುಷಮದುಃಷಮಾ,
ದುಃಷಮಸುಷಮಾ, ದುಃಷಮಾ, ಅತಿದುಃಷಮಾ.
ಉತ್ಸರ್ಪಿಣೀಭೇದಕಾಲ - ಅತಿದುಃಷಮಾ, ದುಃಷಮಾ, ದುಃಷಮಸುಷಮಾ,
ಸುಷಮದುಃಷಮಾ, ಸುಷಮಾ, ಸುಷಮಸುಷಮಾ.

ಮೇಲೆ ವಿವರಿಸಿದ ಕಾಲವಿಭಾಗವನ್ನು ಸಮಾ ಎನ್ನುವರು. ಕಾಲವಿಭಾಗದಲ್ಲಿನ "ಸು"
ಅಕ್ಷರವು ಶ್ರೇಷ್ಟಾರ್ಥ ಸೂಚಿಯಾದರೆ "ದುಃ" ಅಕ್ಷರವು ಹೀನಾರ್ಥವನ್ನು ಸೂಚಿಸುತ್ತದೆ.
ಹೀಗಾಗಿ ಸುಷಮಾ ಎಂದರೆ ಉತ್ತಮಕಾಲ ಹಾಗೂ ದುಃಷಮಾ ಎಂದರೆ ಕೆಟ್ಟಕಾಲ. 

ಉತ್ಸರ್ಪಿಣೀಕಾಲದಲ್ಲಿ ಆಯುಸ್ಸು ಮೊದಲಾದವುಗಳು ಹೆಚ್ಚುತ್ತಾ ಹೋಗುವುದಾದರೆ
ಅವಸರ್ಪಿಣೀಕಾಲದಲ್ಲಿ ಕಡಿಮೆ ಆಗುತ್ತಾ ಹೋಗುವುದು. 

ಕೃಷ್ಣಪಕ್ಷ, ಶುಕ್ಲಪಕ್ಷಗಳು ಒಂದರನಂತರ ಮತ್ತೊಂದು ತಿರುಗುತ್ತಿರುವಂತೆ ಆರು ಕಾಲಭೇದಗಳ
ಪರಿವರ್ತನೆಗಳಿಂದ ಕೂಡಿದ ಉತ್ಸರ್ಪಿಣೀ ಅವಸರ್ಪಿಣೀ ಕಾಲಗಳೂ ಸಹ ತಿರುಗುತ್ತಿರುತ್ತವೆ.

ಅವಸರ್ಪಿಣೀ ಕಾಲಗಣನೆ

ಸುಷಮಸುಷಮಾ - 4 ಕೋಟಿ ಕೋಟಿ ಸಂವತ್ಸರಗಳು
ಸುಷಮಾ - 3 ಕೋಟಿ ಕೋಟಿ ಸಂವತ್ಸರಗಳು
ಸುಷಮದುಃಷಮಾ - 2 ಕೋಟಿ ಕೋಟಿ ಸಂವತ್ಸರಗಳು
ದುಃಷಮಸುಷಮಾ, ದುಃಷಮಾ, ಅತಿದುಃಷಮಾ - 1 ಕೋಟಿ ಕೋಟಿ ಸಂವತ್ಸರಗಳು.
ಒಟ್ಟು 10 ಕೋಟಿ ಕೋಟಿ ಸಂವತ್ಸರಗಳು

ಉತ್ಸರ್ಪಿಣೀಕಾಲಗಣನೆ

ಅತಿದುಃಷಮಾ -   4 ಕೋಟಿ ಕೋಟಿ ಸಂವತ್ಸರಗಳು
ದುಃಷಮಾ -   3 ಕೋಟಿ ಕೋಟಿ ಸಂವತ್ಸರಗಳು
ದುಃಷಮಸುಷಮಾ - 2 ಕೋಟಿ ಕೋಟಿ ಸಂವತ್ಸರಗಳು
ಸುಷಮದುಃಷಮಾ, ಸುಷಮಾ, ಸುಷಮಸುಷಮಾ. -   1 ಕೋಟಿ ಕೋಟಿ ಸಂವತ್ಸರಗಳು
ಒಟ್ಟು 10 ಕೋಟಿ ಕೋಟಿ ಸಂವತ್ಸರಗಳು

ಅವಸರ್ಪಿಣೀಕಾಲ + ಉತ್ಸರ್ಪಿಣೀಕಾಲ = ಒಂದು ಕಲ್ಪ = 20 ಕೋಟಿ ಕೋಟಿ ಸಂವತ್ಸರಗಳು

ಮಹಾಪುರಾಣದಲ್ಲಿನ ಹದಿನಾಲ್ಕು ಮನುಗಳು
                        ಶರೀರದ ಪರಿಮಾಣ
ಪ್ರತಿಶ್ರುತಿ.           1800 ಧನುಸ್ಸಿನಷ್ಟು
ಸನ್ಮತಿ.               1500 ಧನುಸ್ಸಿನಷ್ಟು
ಕ್ಷೇಮಂಕರ.           800 ಧನುಸ್ಸಿನಷ್ಟು
ಕ್ಷೇಮಂಧರ.          750 ಧನುಸ್ಸಿನಷ್ಟು
ಸೀಮಂಕರ.          750 ಧನುಸ್ಸಿನಷ್ಟು
ಸೀಮಂಧರ.          725 ಧನುಸ್ಸಿನಷ್ಟು
ವಿಮಲವಾಹನ.     700 ಧನುಸ್ಸಿನಷ್ಟು
ಚಕ್ಷುಷ್ಮಾನ್.          675 ಧನುಸ್ಸಿನಷ್ಟು
ಯಶಸ್ವಾನ್.          650 ಧನುಸ್ಸಿನಷ್ಟು
ಅಭಿಚಂದ್ರ.           625 ಧನುಸ್ಸಿನಷ್ಟು
ಚಂದ್ರಾಭ.             600 ಧನುಸ್ಸಿನಷ್ಟು
ಮರುದ್ದೇವ.           575 ಧನುಸ್ಸಿನಷ್ಟು
ಪ್ರಸೇನಜಿತ್.          550 ಧನುಸ್ಸಿನಷ್ಟು
ನಾಭಿರಾಜ.            525 ಧನುಸ್ಸಿನಷ್ಟು
ಒಂದು ಧನುಸ್ಸಿನ ಉದ್ದವು ಸಾಮಾನ್ಯವಾಗಿ 5 ಅಡಿ ಇರುವುದು.

ಮನುಗಳ ಆಯುಷ್ಯವನ್ನು ನಿಶ್ಚಯಿಸಿರುವುದು ಹೀಗೆ :-
84 ಲಕ್ಷ ವರ್ಷ = ಒಂದು ಪೂರ್ವಾಂಗ
84 X 84 ಲಕ್ಷ ವರ್ಷ = ಒಂದು ಪೂರ್ವ
ಪೂರ್ವ X 1 ಕೋಟಿ = ಒಂದು ಪೂರ್ವ ಕೋಟಿ 
ಪೂರ್ವ X 84 = ಪರ್ವಾಂಗ
ಪರ್ವಾಂಗ X ಪೂರ್ವಾಂಗ = ಒಂದು ಪರ್ವ
ಪರ್ವ X 84 = ನವುತಾಂಗ
ನವುತಾಂಗ X 84 = ನವುತ
ನವುತ X 84 = ಕುಮುದಾಂಗ
ಕುಮುದಾಂಗ X 84 = ಕುಮುದ
ಕುಮುದ X 84 = ಪದ್ಮಾಂಗ
ಪದ್ಮಾಂಗ X 84 = ಪದ್ಮ
ಪದ್ಮ X 84 = ನಲಿನಾಂಗ
ನಲಿನಾಂಗ X 84 = ನಲಿನ

ಹೀಗೆಯೇ ಒಂದೊಂದನ್ನೂ 84ರಿಂದ ಗುಣಿಸುತ್ತಾ ಹೋದಲ್ಲಿ ಬರುವ ವರ್ಣನೆಗಳೆಂದರೆ -
ಕಮಲಾಂಗ, ಕಮಲ, ತುಟ್ಯಂಗ, ತುಟಿಕ, ಅಟಟಾಂಗ, ಅಟಟ, ಅಮಮಾಂಗ, ಅಮಮ,
ಹಾಹಾಂಗ, ಹಾಹಾ, ಹೂಹ್ವಂಗ, ಹೂಹೂ, ಲತಾಂಗ, ಲತಾ, ಮಹಾಲತಾಂಗ, ಮಹಾಲತಾ,
ಶಿರಃಪ್ರಕಂಪಿತ, ಹಸ್ತಪ್ರಹೇಲಿತ, ಅಚಲ. 

ಅವಸರ್ಪಿಣೀ ಕಾಲದಲ್ಲಿನ ಪರಿಸ್ಥಿತಿಗಳು

ಅವಸರ್ಪಿಣೀ ಕಾಲದಲ್ಲಿ ಮೊದಲು ಸುಷಮಸುಷಮಾ ಕಾಲವು ಭರತಖಂಡದಲ್ಲಿ
ಪ್ರಾರಂಭವಾಗಿತ್ತು. ಆ ಕಾಲದಲ್ಲಿ ಭೂಮಿಯು ಯಾವಸ್ಥಿತಿಯಲ್ಲಿತ್ತು ಹಾಗೂ ಮನುಷ್ಯರ
ಜೀವನ ಶೈಲಿ, ಆಯುಷ್ಯ ಇತರೆ ಸ್ಥಿತಿಗಳು ಹೇಗಿತ್ತು ಎಂಬುದನ್ನು ವೃಷಭಜಿನೇಶ್ವರರು ವಿವರಿಸಿದ್ದಾರೆ.
ಅದನ್ನು ನೋಡೋಣ:

4 ಕೋಟಿ ಕೋಟಿ ಕಾಲದವರೆಗೂ ಸುಷಮಸುಷಮಾ ಕಾಲವಿದ್ದಿತು. ದೇವಕುರು,
ಉತ್ತಮಕುರುಗಳೆಂಬ ಉತ್ತಮವಾದ ಭೋಗ ಭೂಮಿಗಳಲ್ಲಿ ಯಾವ ಸ್ಥಿತಿ ಇತ್ತೋ ಅದೇ ಸ್ಥಿತಿಯು
ಅವಸರ್ಪಿಣೀ ಕಾಲದಲ್ಲಿ ಇದ್ದಿತು. ಆಗ ಮನುಷ್ಯರ ಆಯುಸ್ಸು 3 ಪಲ್ಯೋಪಮದಷ್ಟಿತ್ತು. ಶರೀರವು
6000 ಧನುಸ್ಸಿನಷ್ಟು ಉದ್ಧವಾಗಿತ್ತು. ವಜ್ರಮಯವಾದ ಮೂಳೆಗಳಿದ್ದು ಸುಂದರ ಹಾಗೂ ಸೌಮ್ಯ
ಮತ್ತು ಮನೋಹರವಾಗಿದ್ದರು. ಇಡೀ ಶರೀರವು ಕಾಯಿಸಿದ ಚಿನ್ನದಂತೆ ಪ್ರಕಾಶಿಸುತ್ತಿತ್ತು. ಸದಾ ಕಿರೀಟ,
ಕರ್ಣಕುಂಡಲ, ರತ್ನಾಹಾರ, ಉಡುದಾರ, ಕೈಗಳಿಗೆ ಕಡಗ, ಭುಜಕೀರ್ತಿ, ತೋಳುಬಳೆಗಳನ್ನೂ ಮತ್ತು
ಯಜ್ನೋಪವೀತವನ್ನೂ ಧರಿಸುತ್ತಿದ್ದರು. ಇವರೆಲ್ಲಾ ಧೈರ್ಯಶಾಲಿ, ಬಲಶಾಲಿಗಳಾಗಿದ್ದು ಮಹಾ
ತೇಜಸ್ವಿಗಳಾಗಿ ಪೂಜ್ಯರೆನಿಸಿಕೊಳ್ಳುತ್ತಿದ್ದರು. ಮೂರು ದಿನಕ್ಕೊಮ್ಮೆ ಬೋರೆಕಾಯಿಯಷ್ಟು ಗಾತ್ರದ
ಕಲ್ಪವೃಕ್ಷದ ಆಹಾರವನ್ನು ಸೇವಿಸುತ್ತಿದ್ದರು. ಅವರಿಗೆ ರೋಗ, ಮಲಮೂತ್ರ ಬಾಧೆಗಳಿರಲಿಲ್ಲ. ಅಕಾಲ
ಮರಣವಿಲ್ಲದೆ ತಮ್ಮ ಆಯುಸ್ಸು ಪೂರ್ತಿಯಾಗುವವರೆಗೂ ಬದುಕುತ್ತಿದ್ದರು. ಆಗಿನ ಸ್ತ್ರೀಯರೂ
ಪುರುಷರಷ್ಟೇ ಶರೀರ ಪ್ರಮಾಣ, ಆಯುಸ್ಸು ಇದ್ದು ಅವರು ಪುರುಷರಲ್ಲಿ ಅನುರಕ್ತರಾಗಿ
ಪ್ರಕಾಶಿಸುತ್ತಿದ್ದರು. ಈ ಕಾಲದಲ್ಲಿ ಕಲ್ಪವೃಕ್ಷಗಳು ಯಥೇಷ್ಟವಾಗಿ ಅಭಿವೃದ್ಧಿಗೊಳ್ಳುತ್ತಿದ್ದವು. ಹೀಗೆ ಈ
ಕಾಲದ ಜನಗಳು ಬಹುಕಾಲ ಸುಖದಿಂದ ಜೀವಿಸಿ ಆಯುಷ್ಯ ಪೂರ್ತಿಯಾದ ನಂತರ ಮೇಘಗಳು
ಬಯಲಾಗುವಂತೆ ಮರಣಿಸುತ್ತಿದ್ದರು. ಪುರುಷರು ಅಕಳಿಕೆಯಿಂದಲೂ ಶರೀರತ್ಯಾಗ ಮಾಡಿದರೆ,
ಸ್ತ್ರೀಯರು ಸೀನಿನಿಂದ ಶರೀರತ್ಯಾಗಮಾಡುತ್ತಿದ್ದರು. 

ಎರಡನೇ ಕಾಲವಾದ ಸುಷಮಾ ಕಾಲದಲ್ಲಿ ಆ ಕಾಲವು 3 ಕೋಟಿಕೋಟಿ ಸಂವತ್ಸರ. ಆಗಿನ
ಜನಗಳಿಗೆ ಎರಡು ಪಲ್ಯೋಮಗಳಷ್ಟು ಆಯುಸ್ಸು ಇದ್ದು ಅವರ ಶರೀರವು 4000
ಧನುಸ್ಸಿನಷ್ಟು ಎತ್ತರವಾಗಿತ್ತು. ಅವರು ಎರಡು ದಿನಕ್ಕೊಮ್ಮೆ ತಾರೆಕಾಯಿಯಷ್ಟು ಗಾತ್ರದ
ಅನ್ನವನ್ನು ಕಲ್ಪವೃಕ್ಷದಿಂದ ಉಣ್ಣುತ್ತಿದ್ದರು. 

ಮೂರನೇ ಕಾಲವಾದ ಸುಷಮದುಃಷಮಾ ಕಾಲವು 2 ಕೋಟಿಕೋಟಿ ಸಂವತ್ಸರ. ಆ ಕಾಲದ
ಜನರು ಒಂದು ಪ್ಲಯೋಮಕಾಲ ಜೀವಿಸುತ್ತಿದ್ದರು. ಅವರ ಶರೀರವು ಒಂದು ಹರದಾರಿ
ಪ್ರಮಾಣದಷ್ಟು ಎತ್ತರವಾಗಿತ್ತು. ಒಂದು ದಿನ ಬಿಟ್ಟು ಒಂದು ನೆಲ್ಲಿಕಾಯಿ ಗಾತ್ರದ ಭೋಜನವನ್ನು
ಮಾಡುತ್ತಿದ್ದರು. 

ನಾಲ್ಕನೇ ಕಾಲವಾದ ದುಃಷಮಸುಷಮಾ, ದುಃಷಮಾ, ಅತಿದುಃಷಮಾ ಕಾಲದಲ್ಲಿ ಒಂದು
ಕೋಟಿಕೋಟಿ ಸಂವತ್ಸರಗಳು. ಈ ಕಾಲದ ಜನಗಳ ಆಯುಸ್ಸು ಒಂದು ಪಲ್ಯೋಯೋಪಮದ
ಹತ್ತನೇ ಒಂದು ಭಾಗದಷ್ಟಿತ್ತು. ಅವರ ಶರೀರವು 1800 ಧನುಸ್ಸಿನಷ್ಟು ಎತ್ತರವಾಗಿತ್ತು.  

ದುಃಷಮಸುಷಮಾ ಕಾಲದ ಜನಗಳು ಹಿಂದೆದೂ ಕಾಣದಿದ್ದ ಸೂರ್ಯಚಂದ್ರರನ್ನು ನೋಡಿ
ಭಯಭೀತರಾದರು. ಆ ಯುಗದಲ್ಲಿನ ಪ್ರತಿಶ್ರುತಿ ಮನುವು ಜ್ಯೋತಿರಂಗಕಲ್ಪವೃಕ್ಷಗಳ ಪ್ರಭೆಯು
ಕಡಿಮೆಯಾಗುತ್ತಿರುವುದರಿಂದ ಸೂರ್ಯಚಂದ್ರರು ಕಾಣುತ್ತಿದ್ದಾರೆ, ಅದರಿಂದ ಏನೂ ಭಯಪಡ
ಬೇಕಿಲ್ಲವೆಂದು ಜನರನ್ನು ಸಮಾಧಾನಪಡಿಸಿದನು. 

ಎರಡನೇ ಮನು ಸನ್ಮತಿಯ ಕಾಲದಲ್ಲಿ ಜನಗಳು ರಾತ್ರೆಯವೇಳೆ ನಕ್ಷತ್ರಗಳನ್ನು ನೋಡಿ
ಗಾಭರಿಯಾದರು. ಮನುವು ಜನಗಳಿಗೆ ಸಮಾಧಾನ ಮಾಡಿ ನಕ್ಷತ್ರಗಳ ಬಗ್ಗೆ ತಿಳುವಳಿಕೆಯನ್ನು
ನೀಡಿದನು. 

ಮೂರನೇ ಮನು ಕ್ಷೇಮಂಕರನ ಕಾಲದಲ್ಲಿ ಪ್ರಜೆಗಳು ತಮ್ಮ ಕೈಗಳಿಂದ ಲಾಲನೆ ಪಾಲನೆ
ಮಾಡುತ್ತಿದ್ದ ಶಾಂತಸ್ವಭಾವದ ಸಿಂಹ ಮೊದಲಾದ ಮೃಗಗಳು ವಿಕಾರವನ್ನು ಹೊಂದಿ ಬಾಯಿ
ತೆಗೆದು ಭಯಂಕರವಾದ ಶಬ್ದವನ್ನು ಮಾಡಲು ಪ್ರಾರಂಭಿಸಿತು. ಆಗ ಮನುವು ಈ ವಿಧದ
ಪ್ರಾಣಿಗಳು ಈಗ ಕಾಲದೋಷದಿಂದ ವಿಕಾರವನ್ನು ಹೊಂದಿವೆಯೆಂದೂ ಅವುಗಳನ್ನು
ದೂರಮಾಡುವಂತೆ ತಿಳಿಸಿದನು.

ಐದನೇ ಮನು ಸೀಮಂಕರನ ಕಾಲದಲ್ಲಿ ಕಲ್ಪವೃಕ್ಷಗಳು ಕಡಿಮೆಯಾಗಿ ಸ್ವಲ್ಪ ಫಲಗಳನ್ನು
ಕೊಡುವುದಕ್ಕೆ ಪ್ರಾರಂಭಿಸಿದಾಗ ಕಲ್ಪವೃಕ್ಷಗಳ ಒಡೆತನದ ಸಲುವಾಗಿ ಜನಗಳಲ್ಲಿ ವಿವಾದ
ಹುಟ್ಟಿಕೊಂಡಿತು. ಆಗ ಮನುವು ಕಲ್ಪವೃಕ್ಷಗಳಿಗೆ ಬೇಲಿಯನ್ನು ನಿರ್ಮಿಸಿ ಜನಗಳ
ಗುಂಪುಗಳಿಗೆ ಸಮನಾಗಿ ಹಂಚಿಕೊಟ್ಟನು.

7ನೇ ಮನು ವಿಮಲವಾಹನನ ಕಾಲದಲ್ಲಿ ತನ್ನ ಪ್ರಜೆಗಳಿಗೆ ಆನೆ, ಕುದುರೆ ಮೊದಲಾದ ವಾಹನಗಳ
ಸವಾರಿಯನ್ನೂ, ಕೊಡಲಿ, ಅಂಕುಶ ಇತ್ಯಾದಿಗಳ ಉಪಯೋಗವನ್ನೂ ಉಪದೇಶ ಮಾಡಿದನು.

8ನೇ ಮನು ಚಕ್ಷುಷ್ಮಾನನ ಕಾಲದಲ್ಲಿ ಪ್ರಜೆಗಳು ಮೊದಲಬಾರಿಗೆ ಒಂದು ಕ್ಷಣ ತಮ್ಮ ಮಕ್ಕಳನ್ನು
ನೋಡಿ ಭಯಭೀತರಾದರು. ಅಲ್ಲಿಯವರೆಗೂ ಜನಗಳು ಮಕ್ಕಳು ಜನಿಸುತ್ತಿದ್ದಂತೆ ಅವುಗಳನ್ನು
ನೋಡದೆ ಮರಣಿಸುತ್ತಿದ್ದರು. ಆಗ ಮನುವು, "ಆ ಮಕ್ಕಳು ನಿಮ್ಮ ಮಕ್ಕಳೇ," ಎಂದು ಸಮಾಧಾನ
ಪಡಿಸಿದನು.
ಪ್ರಜೆಗಳು ತಮ್ಮ ಮಕ್ಕಳನ್ನು ಕೆಲವು ಕ್ಷಣಕಾಲದಷ್ಟು ಹೊತ್ತು ದರ್ಶನ ಮಾಡುತ್ತಿದ್ದರು.

9ನೇ ಮನು ಯಶಸ್ವಾನನ ಕಾಲದಲ್ಲಿ ಪ್ರಜೆಗಳು ತಮ್ಮ ಮಕ್ಕಳನ್ನು ನೋಡಿ
ಆಶೀರ್ವಾದವನ್ನು ಮಾಡಿ ಸ್ವಲ್ಪ ಹೊತ್ತು ಬದುಕಿದ್ದು ನಂತರ ಮರಣಿಸುತ್ತಿದ್ದರು. 

10ನೇ ಮನು ಅಭಿಚಂದ್ರನ ಕಾಲದಲ್ಲಿ ಪ್ರಜೆಗಳು ತಮ್ಮ ಮಕ್ಕಳ ಮುಖವನ್ನು ಕುತೂಹಲದಿಂದ
ನೋಡಿ, ಅವರಿಗೆ ಆಶೀರ್ವಾದ ಮಾಡಿ, ರಾತ್ರೆಯ ಕಾಲದಲ್ಲಿ ಅವರಿಗೆ ಚಂದ್ರದರ್ಶನವನ್ನು ಮಾಡಿಸಿ
ಅವರೊಂದಿಗೆ ಆಟವಾಡುತ್ತಿದ್ದರು. 

11ನೇ ಮನು ಚಂದ್ರಾಭನ ಕಾಲದಲ್ಲಿ ಪ್ರಜೆಗಳು ತಮ್ಮ ಮಕ್ಕಳೊಂದಿಗೆ ಕೆಲಕಾಲ ಜೀವಿಸುತ್ತಿದ್ದರು. 

12ನೇ ಮನು ಮರುದ್ದೇವನ ಕಾಲದಲ್ಲಿ ಪ್ರಜೆಗಳು ಮಕ್ಕಳ ಮುಖವನ್ನು ನೋಡಿ ಆ ಮಕ್ಕಳ
ಆಲಿಂಗನದ ಸಂತೋಷವನ್ನು ಅನುಭವಿಸುತ್ತಿದ್ದರು. ಈ ಮನುವು ತನ್ನ ಕಾಲದಲ್ಲಿ ನೀರಿನಲ್ಲಿ ಸಂಚಾರ
ಮಾಡಲು ದೋಣಿ, ಹಡಗುಗಳನ್ನು ನಿರ್ಮಿಸಲು ಪ್ರಜೆಗಳಿಗೆ ಹೇಳಿಕೊಟ್ಟನು ಹಾಗೂ ಗಿರಿ
ದುರ್ಗಗಳನ್ನು ಹತ್ತಲು ಏಣಿ ಪದ್ಧತಿಯನ್ನು ಮಾಡಿಸಿದನು. ಇವನ ಕಾಲದಲ್ಲಿಯೇ ಸಣ್ಣ ಪರ್ವತಗಳು,
ಸಣ್ಣನದಿಗಳೂ, ಉಪಸಮುದ್ರಗಳೂ ಹುಟ್ಟಿದವು. 

13ನೇ ಮನು ಪ್ರಸೇನಾಜಿತ್ ಕಾಲದಲ್ಲಿ ಮಕ್ಕಳು ಜರಾಯುಪಟಲದಿಂದ ಅಚ್ಚಾದಿತವಾಗಿ
ಹುಟ್ಟುತ್ತಿದ್ದವು. ಆಗ ಮನುವು ಜರಾಯುಪಟಲದ ಚೀಲದಿಂದ ಮಕ್ಕಳನ್ನು ಬೇರ್ಪಡಿಸುವ
ವಿಧಾನವನ್ನು ಜನಗಳಿಗೆ ಹೇಳಿಕೊಟ್ಟನು. 

14ನೇ ಮನು ನಾಭಿರಾಜನ ಕಾಲದಲ್ಲಿ ಮಕ್ಕಳು ಹುಟ್ಟುವಾಗ ಹೊಕ್ಕಳಲ್ಲಿ ದಾರವು
ಕಾಣಿಸತೊಡಗಿತು. ಮನುವು ಅದನ್ನು ಕತ್ತರಿಸಿ ತೆಗೆಯುವ ಉಪಾಯವನ್ನು ಪ್ರಜೆಗಳಿಗೆ
ಹೇಳಿಕೊಟ್ಟನು. 

14ಜನ ಮನುಗಳಲ್ಲಿ ಮೊದಲ 5 ಮನುಗಳು ತಪ್ಪು ಮಾಡಿದ ಪ್ರಜೆಗಳಿಗೆ "ಹಾ" ಎಂಬ
ಶಿಕ್ಷೆಯನ್ನು ವಿಧಿಸುತ್ತಿದ್ದರೆ, ನಂತರದ 5 ಮನುಗಳು "ಹಾ ಮಾ" ಎಂಬ ಶಿಕ್ಷೆಯನ್ನು
ವಿಧಿಸುತ್ತಿದ್ದರು. ಮಿಕ್ಕ 4 ಮನುಗಳು "ಹಾ ಮಾ ಧಿಕ್" ಎಂಬ ಶಿಕ್ಷೆಯನ್ನು ವಿಧಿಸುತ್ತಿದ್ದರು. 

ನಂತರದಲ್ಲಿ ಬಂದ ಭರತ ಚಕ್ರವರ್ತಿಯು ಅಧಿಕವಾಗಿ ತಪ್ಪುಮಾಡಿದವರಿಗೆ ವಧೆ, ಬಂದಿಖಾನೆ
ಮುಂತಾದ ಶಾರೀರಿಕ ಶಿಕ್ಷೆಗಳನ್ನು ವಿಧಿಸುತ್ತಿದ್ದನು. 

ಮೂಲ: ಭಗವಜ್ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯ ವಿರಚಿತ ಮಹಾಪುರಾಣ.









Wednesday, March 18, 2020

ಧರ್ಮಶ್ರವಣದ ಶ್ರೋತೃಗಳು

ಧರ್ಮಶ್ರವಣದ ಶ್ರೋತೃಗಳು


ಧರ್ಮಶ್ರವಣದಲ್ಲಿ ಯಾರು ಅಸಕ್ತರಾಗಿರುತ್ತಾರೋ ಅವರನ್ನೆಲ್ಲಾ ಶ್ರೋತೃಗಳೆಂದು ಜ್ಞಾನಿಗಳು
ಹೇಳುವರು. ಅವರಲ್ಲಿ ಉತ್ತಮರು, ಮಧ್ಯಮರು ಹಾಗೂ ನಿಕೃಷ್ಟರು ಎಂಬ ಶ್ರೋತೃಗಳಿರುವರು.
ಅದನ್ನು ಅರಿಯಲು ಮುಂದಿನ ಕಾಲ್ಪನಿಕ ದೃಷ್ಟಾಂತವನ್ನು ಗಮನಿಸೋಣ:

ಮಣ್ಣು, ವಂದ್ರೀ, ಆಡು, ಬೆಕ್ಕು, ಗಿಣಿ, ಬಾಚಣಿಗೆ, ಕಲ್ಲು, ಸರ್ಪ, ಗೋವು, ಹಂಸಪಕ್ಷಿ, ಕೋಣ,
ತೂತುಗಡಿಗೆ, ಕಚ್ಚುವ ನೊಣ ಮತ್ತು ಜಿಗಣೆ - ಈ 15 ವಸ್ತುಗಳ ಸ್ವಭಾವದಂತಿರುವ ಶ್ರೋತೃಗಳಲ್ಲಿ ಪ್ರಮುಖವಾಗಿ
ಉತ್ತಮ, ಮಧ್ಯಮ ಮತ್ತು ಅಧಮ ಎಂಬ ಮೂರು ಭೇದಗಳಿವೆ. ಇದಲ್ಲದೇ ಇನ್ನೂ ವಿಲಕ್ಷಣವಾದ ಶ್ರೋತೃಗಳೂ
ಇರುತ್ತಾರೆ.
ಗೋವು, ಹಂಸಪಕ್ಷಿ ಇವುಗಳಿಗೆ ಸಮಾನರಾದವರು ಉತ್ತಮ ಶ್ರೋತೃಗಳು; ಗೋವು
ಸರೋವರದ ನೀರನ್ನು ಕದಡದೆ ಮೇಲಿನ ತಿಳಿನೀರನ್ನೇ ಕುಡಿಯುತ್ತವೆ. ಹಂಸಪಕ್ಷಿಯು
ನೀರನ್ನು ಬಿಟ್ಟು ಹಾಲನ್ನು ಮಾತ್ರ ಕುಡಿಯುವುದು. ಹಾಗೆ ಉತ್ತಮ ಶ್ರೋತೃಗಳು ದೋಷಗಳನ್ನು
ಬಿಟ್ಟು ಒಳ್ಳೆಯ ಗುಣಗಳನ್ನು ಮಾತ್ರ ಸ್ವೀಕರಿಸುತ್ತಾರೆ.

ಮಣ್ಣು, ಗಿಣಿ ಇವುಗಳಿಗೆ ಸಮಾನರಾದವರು ಮಧ್ಯಮ ಶ್ರೋತೃಗಳು - ಮಣ್ಣನ್ನು ನೆನೆಯಿಸಿದರೆ
ಸ್ವಲ್ಪಹೊತ್ತು ಮೃದುವಾಗಿ ಪುನಃ ಶುಷ್ಕವಾಗುವುದು. ಗಿಳಿಯು ಹೇಳಿಕೊಟ್ಟಷ್ಟು ಮಾತನ್ನು ಮಾತ್ರ
ಹೇಳುತ್ತದೆ. ಇಂತಹ ಸ್ವಭಾವದವರು ಮಧ್ಯಮರು.

ಮಿಕ್ಕ ಪದಾರ್ಥಗಳ ಸ್ವಭಾವದಂತೆ ಸ್ವಭಾವವುಳ್ಳವನು ಅಧಮ ಶ್ರೋತೃ ಎಂದು ಜ್ಞಾನಿಗಳು
ಹೇಳುವರು. 

ದರ್ಪಣ, ತಕ್ಕಡಿ, ದಂಡ, ಒರೆಗಲ್ಲು ಇವುಗಳಿಗೆ ಸಮಾನರಾದ ಶ್ರೋತೃಗಳು ರತ್ನಗಳನ್ನು
ಪರೀಕ್ಷೆಮಾಡುವುದಕ್ಕೆ ಅಧಿಕಾರಿಗಳು.

ಶ್ರೋತೃವು ಕಥಾಶ್ರವಣದಿಂದ ಲೌಕಿಕ ಫಲವನ್ನು ನಿರೀಕ್ಷಿಸಬಾರದು. ಕಥೆಯನ್ನು
ಹೇಳುವವನು ಶ್ರೋತೃಗಳಿಂದ ಸತ್ಕಾರವನ್ನೂ ಹಣವನ್ನೂ ಮೊದಲಾದ ಯಾವ
ಪ್ರತಿಫಲವನ್ನೂ ನಿರೀಕ್ಷಿಸಕೂಡದು. 

ಶ್ರೋತೃವು ಧರ್ಮಕಥೆಯನ್ನು ಕೇಳಲು ಇಚ್ಛಿಸುವ ಗುಣದಿಂದ ಪ್ರಶಂಸಿಸಲ್ಪಡುತ್ತಾನೆ.
ಕಥೆಯನ್ನು ಹೇಳುವವನು ವಾತ್ಸಲ್ಯಾದಿ ಗುಣಗಳಿಂದ ಭೂಷಿತನಾಗಿರಬೇಕು


ಶ್ರೋತೃವಿಗೆ ಸತ್ಕಥೆಯನ್ನು ಕೇಳುವುದರಿಂದ ಉಂಟಾಗುವ ಪುಣ್ಯದಿಂದ ಸಾಂಸಾರಿಕ
ಸುಖದೊಡನೆ ಮೋಕ್ಷಸುಖವೂ ದೊರಕುವುದು.

ಮೂಲ : ಮಹಾಪುರಾಣ

Tuesday, March 17, 2020

ಕವಿಯ ಕವಿತಾಶಕ್ತಿ

ಕವಿಯ ಕವಿತಾಶಕ್ತಿ

ಕವಿಯ ಕವಿತ್ವ ರಚನೆಯ ಶಕ್ತಿಯು ಅಥವಾ ಶಬ್ದಾರ್ಥ ರಚನೆಯ ಕಾರ್ಯವು ಕಾವ್ಯವೆಂದು
ಕವಿತೆಯನ್ನು ಅರಿತವರು ಹೇಳುವರು. ಅಂತಹ ಕಾವ್ಯವು ಪ್ರಸಿದ್ಧವಾದ ಅರ್ಥವುಳ್ಳದ್ದೂ,
ಅಲಂಕಾರದಿಂದ ಕೂಡಿದ್ದೂ ಹಾಗೂ ರಾಸಾಲಂಕಾರದಿಂದ ಸಂಕುಚಿತವಾಗಿಲ್ಲದ್ದೂ
ಆಗಿರಬೇಕು.


ಕೆಲವರು ಕವಿಯ ವಾಕ್ಯಗಳಿಗೆ ಸುಂದರವಾದ ಅರ್ಥವನ್ನು ಅಲಂಕಾರವೆನ್ನುವರು, ಮತ್ತೆ ಕೆಲವರು
ವಿದ್ವಾಂಸರ ಮನಸ್ಸಿಗೆ ಸಂತೋಷವನ್ನುಂಟುಮಾಡುವ ಪದಗಳನ್ನು ಅಲಂಕಾರವೆನ್ನುವರು.
ಇವೆರಡನ್ನೂ ಒಪ್ಪಬಹುದು.


ಅಲಂಕಾರದಿಂದ ಕೂಡಿದ ಶೃಂಗಾರಾದಿ ರಸಭಾರಿತವೂ ಸಾಮ್ಯವುಳ್ಳದ್ದೂ ಬೇರೆಯವರ
ಅಭಿಪ್ರಾಯರಹಿತವಾದ ಸತ್ಪುರುಷರ ಕಾವ್ಯವು ಸರಸ್ವತಿಯ ವದನದಂತಿರುತ್ತದೆ.


ಯಾರು ಉತ್ತಮವಾದ ಪದರಚನೆಯುಳ್ಳ, ಆಲಿಸುವುದಕ್ಕೆ ಮಧುರವಾಗಿದ್ದು ಹಾಗೂ
ಅನಂದವನ್ನುಂಟುಮಾಡುವ ಅರ್ಥಗಳಿಂದ ಕೂಡಿದ ಕಾವ್ಯವನ್ನು ರಚಿಸುವರೋ ಅವರೇ
ಮಹಾಕವಿಗಳು.


ಕೆಲವು ಪದ್ಯಗಳನ್ನು ಎಲ್ಲ ಕವಿಗಳೂ ಕಷ್ಟಪಟ್ಟು ರಚಿಸುತ್ತಾರೆ. ಆದರೆ ಪೂರ್ವಾಪರ
ಸಂಬಂಧಗಳಿಂದ ಕವಿತೆಯನ್ನು ರಚಿಸುವುದು ಕಷ್ಟ.


ವಚನವೆಂಬ ದೊಡ್ಡ ಮಾರ್ಗದಲ್ಲಿ ಸಂಚರಿಸುವವನು ಅರ್ಥವೆಂಬ ಅರಣ್ಯದಲ್ಲಿ ಸಂಚರಿಸಿ
ಖಿನ್ನನಾದ ಕವಿಯು ವಿಶ್ರಮಿಸಲು ಮಹಾಕವಿಗಳೆಂಬ ವೃಕ್ಷವನ್ನು ಆಶ್ರಯಿಸಲೇ ಬೇಕು.


ಬುದ್ದಿ ಅಥವಾ ಪ್ರತಿಭೆ ಎಂಬ ಬೇರುಳ್ಳ, ಗುಣವೆಂಬ ಕಾಂಡವುಳ್ಳ, ವಚನವೆಂಬ ಬಳ್ಳಿಗಳಿಂದ
ಪ್ರಕಾಶಿಸುವ ಮಹಾಕವಿ ಎಂಬ ವೃಕ್ಷವು ಹೂವಿನ ಗೊಂಚಲನ್ನು ಧರಿಸುತ್ತದೆ.


ಬುದ್ಧಿಯೆಂಬ ದಡ ಉಳ್ಳವನೂ, ಉಪಮಾದಿ ಅಲಂಕಾರಗಳೆಂಬ ಮಾಲೆಯುಳ್ಳವನೂ,
ಔದಾರ್ಯ ಎಂಬ ಗುಣಗಳೆಂಬ ರತ್ನಗಳನ್ನು ಉಳ್ಳವನೂ, ಗುರುಪರಂಪರಾರೂಪವಾದ
ಮಹಾಪ್ರವಾಹ ಉಳ್ಳವನೂ ಆದ ಕವಿಯು ಸಮುದ್ರದಂತೆ ಆಚರಿಸುತ್ತಾನೆ. 

ಮೂಲ : ಮಹಾಪುರಾಣ

ಧರ್ಮೋ ರಕ್ಷತಿ ರಕ್ಷಿತಃ

धर्मो रक्षति रक्षितः

ಯಾವುದೇ ಸಮಾಜದಲ್ಲಿ ಅದರ ಅಸ್ತಿತ್ವವು ಜಗತ್ತಿನಲ್ಲಿ ಸದಾ ಕಾಲ ಇರಬೇಕಾದರೆ, ಅದರ ಸಾಹಿತ್ಯವು ಶಾಶ್ವತವಾಗಿರಬೇಕು. ಧರ್ಮವನ್ನು ಅವಲಂಬಿಸಿದವರು ನಾಶವಾದರೂ ಆ ಧರ್ಮವನ್ನು ಬೋಧಿಸುವ ಸಾಹಿತ್ಯವು ನಶಿಸಿಹೋಗದೇ ಇದ್ದಲ್ಲಿ ಅದರ ಪ್ರಭಾವದಿಂದ ಹೊಸದಾಗಿ ಧರ್ಮವನ್ನು ಅವಲಂಬಿಸುವವರು ಉದಯಿಸಬಹುದು. ಆದರೆ ಸಾಹಿತ್ಯವು ನಾಶವಾಗಿ ಧರ್ಮವನ್ನು ಅನುಸರಿಸುವವರು ಇದ್ದರೂ ಅವರಿರುವ ಸಮಯದವರೆಗೂ ಮಾತ್ರ ಧರ್ಮವು ಇದ್ದು ಅವರ ಕಾಲಾನಂತರ ಅವರೊಂದಿಗೇ ಧರ್ಮವೂ ನಾಶವಾಗುವುದು. ಒಂದು ಮರದಲ್ಲಿ ಬಿಟ್ಟ ಹಣ್ಣುಗಳು ನಾಶವಾದರೂ ಮರವಿದ್ದಲ್ಲಿ ಮತ್ತೆ ಹಣ್ಣುಗಳು ಉತ್ಪತ್ತಿಯಾಗಬಹುದು. ಹಣ್ಣುಗಳಿದ್ದು ಮರವೇ ನಾಶವಾದಲ್ಲಿ ಅವುಗಳು ಮುಗಿದಮೇಲೆ ಮತ್ತೆ ಹಣ್ಣುಗಳು ದೊರೆಯುವುದಿಲ್ಲ. ಮತ್ತೊಂದು ಉದಾಹರಣೆಯೆಂದರೆ ರತ್ನಗಳು ನಾಶವಾದರೂ ಅವುಗಳಿದ್ದ ಗಣಿಯು ನಾಶವಾಗದಿದ್ದರೆ ಮತ್ತೆ ರತ್ನಗಳನ್ನು ಹೊರತೆಗೆಯಬಹುದು. ಗಣಿಯೇ ನಾಶವಾದಲ್ಲಿ ರತ್ನಗಳ ಉತ್ಪತ್ತಿಯು ಅಸಾಧ್ಯ. 
ಆದ್ದರಿಂದ ಧರ್ಮದ ಅಭಿಮಾನಿಯು ತನ್ನ ಧರ್ಮದ ಸ್ಥಿರತೆಗೆ ಮೂಲಕಾರಣವಾದ ಸಾಹಿತ್ಯಕ್ಕೆ ಲೋಪವಾಗದಂತೆ ನೋಡಿಕೊಳ್ಳುವುದೇ ಅವನ ಪರಮ/ಪ್ರಥಮ ಕರ್ತವ್ಯ. ಇದೇ ಅವನು ಮಾಡುವ ಧರ್ಮರಕ್ಷಣೆಯ ಕಾರ್ಯ. धर्मो रक्षति रक्षितः


ಮೂಲ: ಮಹಾಪುರಾಣ