धर्मो रक्षति रक्षितः
ಯಾವುದೇ ಸಮಾಜದಲ್ಲಿ ಅದರ ಅಸ್ತಿತ್ವವು ಜಗತ್ತಿನಲ್ಲಿ ಸದಾ ಕಾಲ ಇರಬೇಕಾದರೆ, ಅದರ ಸಾಹಿತ್ಯವು ಶಾಶ್ವತವಾಗಿರಬೇಕು. ಧರ್ಮವನ್ನು ಅವಲಂಬಿಸಿದವರು ನಾಶವಾದರೂ ಆ ಧರ್ಮವನ್ನು ಬೋಧಿಸುವ ಸಾಹಿತ್ಯವು ನಶಿಸಿಹೋಗದೇ ಇದ್ದಲ್ಲಿ ಅದರ ಪ್ರಭಾವದಿಂದ ಹೊಸದಾಗಿ ಧರ್ಮವನ್ನು ಅವಲಂಬಿಸುವವರು ಉದಯಿಸಬಹುದು. ಆದರೆ ಸಾಹಿತ್ಯವು ನಾಶವಾಗಿ ಧರ್ಮವನ್ನು ಅನುಸರಿಸುವವರು ಇದ್ದರೂ ಅವರಿರುವ ಸಮಯದವರೆಗೂ ಮಾತ್ರ ಧರ್ಮವು ಇದ್ದು ಅವರ ಕಾಲಾನಂತರ ಅವರೊಂದಿಗೇ ಧರ್ಮವೂ ನಾಶವಾಗುವುದು. ಒಂದು ಮರದಲ್ಲಿ ಬಿಟ್ಟ ಹಣ್ಣುಗಳು ನಾಶವಾದರೂ ಮರವಿದ್ದಲ್ಲಿ ಮತ್ತೆ ಹಣ್ಣುಗಳು ಉತ್ಪತ್ತಿಯಾಗಬಹುದು. ಹಣ್ಣುಗಳಿದ್ದು ಮರವೇ ನಾಶವಾದಲ್ಲಿ ಅವುಗಳು ಮುಗಿದಮೇಲೆ ಮತ್ತೆ ಹಣ್ಣುಗಳು ದೊರೆಯುವುದಿಲ್ಲ. ಮತ್ತೊಂದು ಉದಾಹರಣೆಯೆಂದರೆ ರತ್ನಗಳು ನಾಶವಾದರೂ ಅವುಗಳಿದ್ದ ಗಣಿಯು ನಾಶವಾಗದಿದ್ದರೆ ಮತ್ತೆ ರತ್ನಗಳನ್ನು ಹೊರತೆಗೆಯಬಹುದು. ಗಣಿಯೇ ನಾಶವಾದಲ್ಲಿ ರತ್ನಗಳ ಉತ್ಪತ್ತಿಯು ಅಸಾಧ್ಯ.
ಆದ್ದರಿಂದ ಧರ್ಮದ ಅಭಿಮಾನಿಯು ತನ್ನ ಧರ್ಮದ ಸ್ಥಿರತೆಗೆ ಮೂಲಕಾರಣವಾದ ಸಾಹಿತ್ಯಕ್ಕೆ ಲೋಪವಾಗದಂತೆ ನೋಡಿಕೊಳ್ಳುವುದೇ ಅವನ ಪರಮ/ಪ್ರಥಮ ಕರ್ತವ್ಯ. ಇದೇ ಅವನು ಮಾಡುವ ಧರ್ಮರಕ್ಷಣೆಯ ಕಾರ್ಯ. धर्मो रक्षति रक्षितः
ಮೂಲ: ಮಹಾಪುರಾಣ
No comments:
Post a Comment